Skip to content

Freedom of the present | ಈ ನಡುವಿನ ಬಿಡುವು

ಅಳಿಸಲಾಗದ ಅಕ್ಷರವ ಬರೆಯಲಾಗದು!

Menu
  • Privacy Policy
Menu

ಉನ್ನತ ಶಿಕ್ಷಣ: ಸುಧಾರಣೆಗೆ ಮಂತ್ರದಂಡವಿಲ್ಲ

Posted on March 28, 2010May 24, 2015 by Ismail

ಉನ್ನತ ಶಿಕ್ಷಣವೆಂದರೆ  ಜ್ಞಾನದ ಸೃಷ್ಟಿಗೆ ಬೇಕಾದ ತರಬೇತಿಯೇ, ಕೌಶಲ್ಯ ವೃದ್ಧಿಯೇ? ಈ ಪ್ರಶ್ನೆಗೆ ಭಾರತೀಯ ಸಂದರ್ಭದಲ್ಲಿ ಒಂದು ಸ್ಪಷ್ಟ ಉತ್ತರವಿಲ್ಲ. ಉನ್ನತ ಶಿಕ್ಷಣದ ವ್ಯಾಪ್ತಿಯಲ್ಲಿ ಬರುವ ತಾಂತ್ರಿಕ, ವೈದ್ಯಕೀಯ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳು ಕೌಶಲ್ಯ ವೃದ್ಧಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡಿವೆ. ಮಾನವಿಕ ವಿಭಾಗಗಳನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಇನ್ನೂ ಜೀವಂತವಾಗಿಟ್ಟುಕೊಂಡಿರುವ ಸಾಮಾನ್ಯ ಪದವಿ ವಿಷಯಗಳಲ್ಲಿ ಇತ್ತ ಕೌಶಲ್ಯ ವೃದ್ಧಿಗೆ ಬೇಕಾದ ಅಂಶಗಳೂ ಇಲ್ಲ. ಅತ್ತ ಜ್ಞಾನದ ಸೃಷ್ಟಿಗೆ ಅಗತ್ಯವಿರುವ ಮೂಲಭೂತ ಪಠ್ಯಗಳ ಕಲಿಕೆಯೂ ಇಲ್ಲ.

ಇದೇನು ರಾತ್ರಿ ಬೆಳಗಾಗುವುದರೊಳಗೆ ಉದ್ಭವಿಸಿದ ಸಮಸ್ಯೆಯಲ್ಲ. ಇದಕ್ಕೆ ಅರವತ್ತು ವರ್ಷಗಳ ಇತಿಹಾಸವಿದೆ. ಬೆರಳೆಣಿಕೆಯ ‘ಉತ್ಕೃಷ್ಟತೆಯ ದ್ವೀಪ’ಗಳನ್ನು ಹೊರತು ಪಡಿಸಿದರೆ ನಮಗಿರುವುದು ಹಿಂದುಳಿಯುವಿಕೆಯ ಇತಿಹಾಸ ಮಾತ್ರ. ಅರವತ್ತು ಎಪ್ಪತ್ತರ ದಶಕದಲ್ಲಿ ದೇಶದ ಒಟ್ಟು ಸಂಶೋಧನೆಯ ಶೇಕಡಾ 50ಕ್ಕಿಂತಲೂ ಹೆಚ್ಚು ಪಾಲನ್ನು ನೀಡುತ್ತಿದ್ದ ವಿಶ್ವವಿದ್ಯಾಲಯಗಳೀಗ ಒಂದಂಕೆಯ ಪಾಲಿಗೆ ಸೀಮಿತಗೊಂಡಿವೆ. ಕಳೆದ ಅರವತ್ತು ವರ್ಷಗಳಲ್ಲಿ ಉತ್ಕೃಷ್ಟ ಸ್ಥಿತಿಯಿಂದ ಶೂನ್ಯದ ಮಟ್ಟಕ್ಕೆ ಇಳಿದ ವಿವಿಗಳ ಉದಾಹರಣೆ ಸಿಗುತ್ತದೆಯೇ ಹೊರತು ಶೂನ್ಯದ ಮಟ್ಟದಿಂದ ಉತ್ಕೃಷ್ಟತೆಗೇರಿದ ಒಂದೇ ಒಂದು ವಿವಿಯ ಉದಾಹರಣೆಯೂ ನಮ್ಮ ಮುಂದಿಲ್ಲ.

2006ರಲ್ಲಿ ಜ್ಞಾನ ಆಯೋಗ ನೀಡಿದ ವರದಿ, 2009ರಲ್ಲಿ ಯಶಪಾಲ್ ಸಮಿತಿ ನೀಡಿದ ವರದಿಗಳು ಭಾರತೀಯ ಉನ್ನತ ಶಿಕ್ಷಣದ ಈ ದುರವಸ್ಥೆಯ ಕಾರಣಗಳನ್ನು ಪಟ್ಟಿ ಮಾಡಿವೆ. ಉನ್ನತ ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಎರಡೂ ವರದಿಗಳು ಹಲವು ಸಲಹೆಗಳನ್ನು ನೀಡಿವೆ. ಸರ್ಕಾರ ಈ ಎಲ್ಲಾ ಸಲಹೆಗಳನ್ನು ಸಮಗ್ರವಾಗಿ ಗ್ರಹಿಸಿ ಒಂದು ಕಾರ್ಯಯೋಜನೆಯನ್ನು ರೂಪಿಸುವ ಬದಲಿಗೆ ಉನ್ನತ ಶಿಕ್ಷಣವನ್ನು ಸುಧಾರಿಸುವ ಮಂತ್ರದಂಡವೊಂದನ್ನು ಶೋಧಿಸಲು ಹೊರಟಿದೆ. ಅದರ ಭಾಗವಾಗಿ ಕಾಲೇಜುಗಳು ಮತ್ತು ವಿವಿಗಳ ಸಂಖ್ಯೆಯನ್ನು ಹೆಚ್ಚಿಸುವ, ಇಡೀ ಉನ್ನತ ಶಿಕ್ಷಣ ಕ್ಷೇತ್ರದ ಕೇಂದ್ರೀಕೃತ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮಗಳಿಗೆ ಮುಂದಾಗಿದೆ. ಇದರ ಭಾಗವಾಗಿ ಈಗ ಇರುವ 480 ವಿವಿಗಳು ಮತ್ತು 22,000 ಕಾಲೇಜುಗಳ ಜೊತೆಗೆ ಇನ್ನು ಹತ್ತು ವರ್ಷಗಳಲ್ಲಿ 800 ಹೊಸ ವಿವಿಗಳು ಮತ್ತು 35,000 ಕಾಲೇಜುಗಳನ್ನು ತೆರೆಯಲು ತೀರ್ಮಾನಿಸಲಾಗಿದೆ. ಜೊತೆಗೆ ಉನ್ನತ ಶಿಕ್ಷಣ ಕ್ಷೇತ್ರವನ್ನು ಕೇಂದ್ರೀಕೃತ ನಿಯಂತ್ರಣಕ್ಕಾಗಿ ಮಸೂದೆಯ ಕರಡೊಂದನ್ನು ಸಿದ್ಧಪಡಿಸಿದೆ.

ಕಾಲೇಜುಗಳು ಮತ್ತು ವಿವಿಗಳ  ಸಂಖ್ಯೆಯ ಹೆಚ್ಚಳಕ್ಕೆ ಸರ್ಕಾರ ನೀಡುತ್ತಿರುವ ಕಾರಣ ಉನ್ನತ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವುದು. ಈಗಿರುವ ಕಾಲೇಜುಗಳು ಮತ್ತು ವಿವಿಗಳು  ಉನ್ನತ ಶಿಕ್ಷಣದ ಅರ್ಹತೆ ಪಡೆದಿರುವ ಶೇಕಡಾ 12.4ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸುತ್ತಿದೆ. ಕಾಲೇಜುಗಳು ಮತ್ತು ವಿವಿಗಳ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ ಈ ಪ್ರಮಾಣವನ್ನು ಶೇಕಡಾ 40ಕ್ಕೆ ಏರಿಸಬಹುದೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಕಪಿಲ್ ಸಿಬಲ್ ಹೇಳುತ್ತಿದ್ದಾರೆ.

ನೆರೆಯ ಚೀನಾದಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸುವ ಶೇಕಡಾ 15ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಾರೆ. ಅಭಿವೃದ್ಧಿ ಹೊಂದಿದ ಯೂರೋಪ್ ಮತ್ತು ಅಮೆರಿಕದಲ್ಲಿ ಈ ಪ್ರಮಾಣ ಶೇಕಡಾ 50ರಷ್ಟಿದೆ. ಈ ಹೋಲಿಕೆಗಳನ್ನು ಮುಂದಿಟ್ಟುಕೊಂಡರೆ ಕಾಲೇಜುಗಳು ಮತ್ತು ವಿವಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಸರಿ. ಆದರೆ ಇದಕ್ಕೆ ಅನುಸರಿಸಬೇಕಾದ ಮಾರ್ಗ ಯಾವುದು? ಈ ಹೆಚ್ಚಳ ಭಾರತೀಯ ಉನ್ನತ ಶಿಕ್ಷಣ ಕ್ಷೇತ್ರ ಈಗ ಎದುರಿಸುತ್ತಿರುವ ಜ್ಞಾನ ಸೃಷ್ಟಿಯ ತರಬೇತಿ ಮತ್ತು ಕೌಶಲ್ಯ ವೃದ್ಧಿಯ ದ್ವಂದ್ವವನ್ನು ಹೇಗೆ ಪರಿಹರಿಸುತ್ತದೆ ಎಂಬ ಪ್ರಶ್ನೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರ ಚಿಂತನೆಗಳಲ್ಲಿ ಉತ್ತರ ಸಿಗುವುದಿಲ್ಲ.

ಉನ್ನತ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿ ಅವಕಾಶವನ್ನು ನಿರೀಕ್ಷಿಸುತ್ತಿರುವವರು ಯಾರು ಮತ್ತು ಯಾವ ಬಗೆಯ ಅವಕಾಶಗಳ ನಿರೀಕ್ಷೆ ಅವರಿಗಿದೆ ಎಂಬುದನ್ನು ಸರ್ಕಾರ ಮರೆತಿರುವಂತೆ ಕಾಣಿಸುತ್ತಿದೆ. ನಮ್ಮಲ್ಲಿ  ಉನ್ನತ ಶಿಕ್ಷಣದ ಅವಕಾಶದ ಕೊರತೆಗೆ ಹಲವು ಮುಖಗಳಿವೆ. ಹಣವಿರುವವರು ತಮಗೆ ಬೇಕಿರುವ ಶಿಕ್ಷಣಕ್ಕಾಗಿ ಮ್ಯಾನೇಜ್‌ಮೆಂಟ್ ಸೀಟುಗಳನ್ನು ಪಡೆಯುತ್ತಾರೆ. ಇನ್ನೂ ಹೆಚ್ಚು ಹಣವಿರುವವರು ವಿದೇಶಗಳಿಗೆ ಹೋಗುತ್ತಾರೆ. ಮೆರಿಟ್ ಮಾರುಕಟ್ಟೆಯನ್ನು ಗೆಲ್ಲಬಲ್ಲವರಿಗೆ ಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯಗಳಿವೆ. ಈ ಎರಡನ್ನೂ ಸಾಧಿಸಲಾಗದ ಮಧ್ಯಮ ಮಟ್ಟದವರಿಗೆ ಏನೂ ಇಲ್ಲ. ಅವರಿಗಿರುವುದು ಹೆಚ್ಚುಕಡಿಮೆ ಅಪ್ರಸ್ತುತವಾಗಿರುವ ನಮ್ಮ ವಿಶ್ವವಿದ್ಯಾಲಯಗಳ ಉನ್ನತ ಶಿಕ್ಷಣ ಮಾತ್ರ! ಇದು ಜ್ಞಾನ ಸೃಷ್ಟಿಯ ತರಬೇತಿಯೂ ಅಲ್ಲ. ಕೌಶಲ್ಯ ವೃದ್ಧಿಯೂ ಅಲ್ಲ.

ಈ ವಿಷಯದಲ್ಲಿ ಚೀನಾದ ಉದಾಹರಣೆ ಹೆಚ್ಚು ಪ್ರಸ್ತುತವಾಗುತ್ತದೆ. ಇಲ್ಲಿರುವ ಒಟ್ಟು ವಿದ್ಯಾರ್ಥಿಗಳಲ್ಲಿ ಶೇಕಡಾ 15ರಷ್ಟು ಮಂದಿ ಅಂದರೆ ಭಾರತಕ್ಕಿಂತ ಶೇಕಡಾ 2.6ರಷ್ಟು ಹೆಚ್ಚು ವಿದ್ಯಾಥಿಗಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಾರೆ. ಆದರೆ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅವರ ಪಾಲು ಭಾರತಕ್ಕಿಂತ ಬಹಳ ದೊಡ್ಡದು. ಚೀನಾ ಉನ್ನತ ಶಿಕ್ಷಣವನ್ನು ಕೌಶಲ್ಯ ವೃದ್ಧಿಯ ಕ್ಷೇತ್ರದಿಂದ ಹೊರಗಿಟ್ಟು ಜ್ಞಾನ ಸೃಷ್ಟಿಯ ಅಗತ್ಯಕ್ಕೆ ಬೇಕಿರುವ ತರಬೇತಿಯ ಕ್ಷೇತ್ರವನ್ನಾಗಿ ಬೆಳೆಸಿದೆ. ಪರಿಣಾಮವಾಗಿ ವೃತ್ತಿ ಕೌಶಲ್ಯವನ್ನಷ್ಟೇ ನಿರೀಕ್ಷಿಸುವವರಿಗೆ ಬೇಕಿರುವ ಶಿಕ್ಷಣ ಕ್ಷೇತ್ರವೂ ಅಲ್ಲಿ ಬೆಳೆದಿದೆ. ಪರಿಣಾಮವಾಗಿ ಜ್ಞಾನಾಧಾರಿತ ಮಾರುಕಟ್ಟೆ ಮತ್ತು ಕೌಶಲ್ಯಾಧಾರಿತ ಉತ್ಪಾದನಾ ಕ್ಷೇತ್ರಗಳೆರಡರ ಮಧ್ಯೆ ಒಂದು ಸಮತೋಲನ ಸಾಧ್ಯವಾಗಿದೆ. ಉನ್ನತ ಶಿಕ್ಷಣದ ಸುಧಾರಣೆಗೆ ಹೊರಟಿರುವ ಕೇಂದ್ರ ಸರ್ಕಾರ ಈ ಬಗೆಯ ಸಮತೋಲನದ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಬದಲಿಗೆ ಈಗಿನ ಸ್ಥಿತಿಯನ್ನೇ ಮತ್ತಷ್ಟು ವಿಸ್ತರಿಸುವ ದಾರಿಯಲ್ಲಿ ಸಾಗುತ್ತಿದೆ.

ನಮ್ಮ ಶಿಕ್ಷಣ ನೀತಿಯನ್ನು ರೂಪಿಸುವ ಕ್ರಿಯೆಯಲ್ಲಿ ಯಾವತ್ತೂ ಕಾಡುವ ಸಮಸ್ಯೆಯೆಂದರೆ ‘ಸಂಭವನೀಯ ದುರ್ಬಳಕೆಯನ್ನು ತಡೆಯಲು ಬೇಕಾದ ಕ್ರಮ’ದ ಹೆಸರಿನಲ್ಲಿ ನುಸುಳುವ ಆಡಳಿತಶಾಹಿ ಮನೋಭಾವ. ಹೊಸ ಕರಡು ಮಸೂದೆಯಲ್ಲೂ ಇದು ವ್ಯಾಪಕವಾಗಿ ನುಸುಳಿದೆ. ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ವಿವಿಗಳ ನೇಮಕಾತಿಗಳನ್ನೂ ಹೊಸ ರಾಷ್ಟ್ರೀಯ ಆಯೋಗದ ಪರಿಧಿಗೇ ತರುವುದೂ ಸೇರಿದಂತೆ ಅನೇಕ ಅಂಶಗಳು ಈ ಮಸೂದೆಯಲ್ಲಿದೆ.

ಇದು ಕೇಂದ್ರ-ರಾಜ್ಯ ಸಂಬಂಧಗಳ ಕುರಿತಂತೆ ಒಂದು ವಿವಾದವನ್ನು ಹುಟ್ಟು ಹಾಕುವ ಮಟ್ಟದಲ್ಲಿವೆ. ಇದೇ ವೇಳೆ ಶೈಕ್ಷಣಿಕ ಗುಣಮಟ್ಟವನ್ನು ಖಾತರಿ ಪಡಿಸಿಕೊಳ್ಳುವ ಕ್ರಮಗಳ ಕುರಿತಂತೆ ಮಸೂದೆ ಯಾವುದೇ ಸ್ಪಷ್ಟ ನೀತಿಗಳನ್ನು ಹೊಂದಿಲ್ಲ.

ಉನ್ನತ ಶಿಕ್ಷಣದ ಸುಧಾರಣೆಗಾಗಿ ಸರ್ಕಾರ ಬಳಸಲು ಹೊರಟಿರುವ ಮಂತ್ರದಂಡದಿಂದ ಮತ್ತಷ್ಟು ವಿಶ್ವವಿದ್ಯಾಲಯಗಳು ಮತ್ತು ಅಂಥದ್ದೇ  ಹೊಸ ಕಾಲೇಜುಗಳ ಸ್ಥಾಪನೆಯಲ್ಲಿ ಅಂತ್ಯವಾಗುವಂತಿದೆ. ಇವುಗಳಲ್ಲಿ ಖಾಸಗಿ ಮತ್ತು ವಿದೇಶಿ ವಿವಿಗಳ ಪಾಲೇ ಹೆಚ್ಚಿರುವುದರಿಂದ ಅವಕಾಶದ ಸಮಸ್ಯೆಯನ್ನೇನು ಬಗೆಹರಿಸುವಂತೆ ಕಾಣಿಸುವುದಿಲ್ಲ. ಇನ್ನು ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಜ್ಞಾನ ಸೃಷ್ಟಿ ಮತ್ತು ಕೌಶಲ್ಯ ವೃದ್ಧಿಯ ಗೊಂದಲವನ್ನು ಪರಿಹರಿಸದೇ ಇರುವುದರಿಂದ ಈಗಿರುವ ಸಮಸ್ಯೆಯನ್ನು ಮತ್ತಷ್ಟು ದೊಡ್ಡದೂ ಸಂಕೀರ್ಣವೂ ಆಗುವಂತೆ ಮಾಡಬಹುದಷ್ಟೇ

(ಪ್ರಜಾವಾಣಿ ಪತ್ರಿಕೆಯ ಅಂತರಾಳ ಪುಟದಲ್ಲಿ ಪ್ರಕಟವಾದ ಲೇಖನ)

March 2010
M T W T F S S
1234567
891011121314
15161718192021
22232425262728
293031  
« Jun   Jun »
  • July 2024
  • December 2017
  • November 2017
  • March 2017
  • February 2017
  • January 2017
  • June 2014
  • March 2010
  • June 2009
  • May 2009
  • April 2009
  • March 2009
  • February 2009
  • January 2009
  • October 2008
  • September 2008
  • August 2008
  • July 2008
  • May 2008
  • April 2008
  • March 2008
  • February 2008
  • January 2008
  • December 2007
  • November 2007
  • September 2007
  • August 2007
  • July 2007
  • April 2007
  • January 2007
  • December 2006
  • October 2006
  • September 2006
  • May 2006
  • ಅಲೆಯೂ ನೀರೂ ಎರಡಲ್ಲ ಎಂದು ಅರಿವಾದಾಗ…
  • ನನ್ನ ಬದುಕಿನ ಗುರುವಾದ ನಾರಾಯಣ ಗುರು
  • ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ
  • ಇಂಟರ್‌ನೆಟ್ ಇಲ್ಲದ ಡಿಜಿಟಲ್ ಆರ್ಥಿಕತೆ!
  • ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್
  • ಇ-ಹೊತ್ತು ಅಂಕಣ
  • ಒಂಟಿದನಿ (ಉದಯವಾಣಿ ಅಂಕಣ)
  • ಘಟನೆಗಳು
  • ಟಿಪ್ಪಣಿ
  • ನಾರಾಯಣ ಗುರು
  • ಪ್ರಜಾವಾಣಿ
  • ಬಿಡಿ ಬರಹಗಳು
  • Privacy Policy
© 2026 Freedom of the present | ಈ ನಡುವಿನ ಬಿಡುವು | Powered by Superbs Personal Blog theme